
ಮೈಸೂರು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವಮಾನವ ದಿನಾಚರಣೆ ಉತ್ಸಾಹಭರಿತವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯಿತು. ಮಾನವೀಯ ಮೌಲ್ಯಗಳು, ಸಹಬಾಳ್ವೆ ಮತ್ತು ಶಾಂತಿದಾಯಕ ಸಮಾಜ ನಿರ್ಮಾಣ ಎಂಬ ಸಂದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಪ್ರಮುಖ ಅತಿಥಿಯಾಗಿ ಮಾತನಾಡಿದ ಕನ್ನಡ ಉಪನ್ಯಾಸಕಿ ಡಾ. ಕೆ. ಮಾಲತಿ ಅವರು, ವಿಶ್ವಮಾನವ ತತ್ವವು ಕೇವಲ ಆಲೋಚನೆ ಅಥವಾ ನುಡಿಗಟ್ಟಿಗೆ ಸೀಮಿತವಾಗದೆ, ಪ್ರತಿ ವ್ಯಕ್ತಿಯ ದಿನನಿತ್ಯ ಜೀವನದಲ್ಲಿ ಪ್ರತಿಫಲಿಸಬೇಕು ಎಂದು ಹೇಳಿದರು. ಜಾತಿ, ಧರ್ಮ, ಭಾಷೆ ಮತ್ತು ವರ್ಗದ ಬೇಧ ಮೀರಿದ ಮಾನವೀಯ ದೃಷ್ಟಿಯೇ ನಿಜವಾದ ವಿಶ್ವಮಾನವ ಧರ್ಮದ ಸಾರವೆಂದರು.
ಆಂಗ್ಲ ಉಪನ್ಯಾಸಕರಾದ ಶ್ರೀ ರಂಗಸ್ವಾಮಿಯವರು ಮಾತನಾಡಿ, ಇಂದಿನ ಕಾಲದಲ್ಲಿ ಅಸಹಿಷ್ಣುತೆ ಹಾಗೂ ವೈಮನಸ್ಯ ಹೆಚ್ಚುತ್ತಿರುವ ಸಂದರ್ಭಗಳಲ್ಲಿ ವಿಶ್ವಮಾನವ ಚಿಂತನೆ ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಯುವಜನತೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಶಾಂತಿ ಮತ್ತು ಸೌಹಾರ್ದತೆಯಿಂದ ಕೂಡಿದ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ಪ್ರಾಂಶುಪಾಲರಾದ ಸಿ. ಆರ್. ದಿನೇಶ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಶಿಕ್ಷಣವು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತವಾಗದೆ ಉತ್ತಮ ವ್ಯಕ್ತಿತ್ವ ಹಾಗೂ ಮೌಲ್ಯಾಧಾರಿತ ಬದುಕಿಗೆ ಮಾರ್ಗದರ್ಶಿಯಾಗಬೇಕು ಎಂದರು.
ವಿಶ್ವಮಾನವ ದಿನಾಚರಣೆ ಯುವ ವಿದ್ಯಾರ್ಥಿಗಳಲ್ಲಿ ಸಹಾನುಭೂತಿ, ಸೇವಾಭಾವನೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮನೋಭಾವ ಬೆಳೆಸಲು ದಾರಿಯಾಗುತ್ತದೆ ಎಂದು ವಿಶದಪಡಿಸಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಕನ್ನಡ ಉಪನ್ಯಾಸಕಿ ಬಿಂದು ರವರು ವಿಶ್ವಮಾನವ ಗೀತೆಯನ್ನು ಮನಸೂರೆಗೊಂಡ ರೀತಿಯಲ್ಲಿ ಹಾಡಿದರು.
ಕಾರ್ಯಕ್ರಮವನ್ನು ಪ್ರಕಾಶ್ ನಿರೂಪಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹತ್ವದ ಸಂದೇಶವನ್ನು ಹಂಚಿಕೊಂಡರು.





