
ತುರಗನೂರು ಗ್ರಾ.ಪಂ ಪಿಡಿಓ ಮಹೇಶ್ ವಿರುದ್ಧ ತುರಗನೂರು ಚಿನ್ನಸ್ವಾಮಿ ಗಂಭೀರ ಆರೋಪ
ಮೈಸೂರು: ತಿ. ನರಸೀಪುರದ ಯಾಚನಹಳ್ಳಿ ಗ್ರಾಮದ ನಿವಾಸಿ ಚಿನ್ನಸ್ವಾಮಿ ಅವರು, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ತುರಗನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಮಹೇಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.
ತುರಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ, ಕಾನೂನಿನ ಪ್ರಕಾರ ನೀಡಬೇಕಾದ ಸಂಪೂರ್ಣ ಮಾಹಿತಿಯನ್ನು ನೀಡದೇ, ತಪ್ಪು, ಅಪೂರ್ಣ ಹಾಗೂ ಗೊಂದಲಕಾರಿ ದಾಖಲೆಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ದೂರಿದರು.
ಪಂಚಾಯಿತಿಯಿಂದ ನೀಡಲಾದ ದಾಖಲೆಗಳಲ್ಲಿ ಹಲವು ಕಾಮಗಾರಿಗಳ ವಿವರಗಳು ಕಾಣೆಯಾಗಿವೆ. ಇದನ್ನು ಪ್ರಶ್ನಿಸಿದಾಗ ಮಾಹಿತಿ ಹಕ್ಕು ಆಯೋಗ ಅಥವಾ ನ್ಯಾಯಾಲಯಕ್ಕೆ ಹೋಗಿ ಎಂದು ಪಿಡಿಓ ಅವರು ನಿರ್ಲಕ್ಷ್ಯದ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಕಾಮಗಾರಿಗಳ ಹೆಸರು, ಅಂದಾಜು ವೆಚ್ಚ, ಗುತ್ತಿಗಾದಾರರ ಹೆಸರು ಸೇರಿದಂತೆ ಕಡ್ಡಾಯ ಮಾಹಿತಿಯನ್ನು ನೀಡದೇ, ಕೇವಲ ಎನ್.ಆರ್.ಎಂ. (NRM) ಎಂದು ಮಾತ್ರ ದಾಖಲೆ ನೀಡಲಾಗುತ್ತಿದೆ. ಇದರಿಂದ ಸಾರ್ವಜನಿಕ ಹಣದ ಬಳಕೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಸ್ಪಷ್ಟವಾಗುತ್ತದೆ ಎಂದು ಚಿನ್ನಸ್ವಾಮಿ ಹೇಳಿದರು.
“ನರೇಗಾ ಯೋಜನೆಯಲ್ಲಿ ಕೆಲಸ ಮಾಡದವರನ್ನು ನಿಲ್ಲಿಸಿ ಫೋಟೋ ತೆಗೆದು ಕೂಲಿ ಹಣ ಜಮಾ ಮಾಡಲಾಗುತ್ತಿದೆ. ಕೈಕಾರ್ಯಕ್ಕೆ ಮೀಸಲಾದ ಯೋಜನೆಯಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಲಾಗಿದೆ. ಕಡಿಮೆ ವೆಚ್ಚದ ಕಾಮಗಾರಿಗಳಿಗೆ ಲಕ್ಷಾಂತರ ರೂಪಾಯಿ ಬಿಲ್ ಸಲ್ಲಿಸಲಾಗಿದೆ”
(ವರದಿ: ನಂಜುಂಡ ನಿಲಸೋಗೆ)





