
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ಗಣನೀಯ ಕೊಡುಗೆಯೊಂದು ತಲುಪಿದೆ. ಕರ್ನಾಟಕ ಮೂಲದ ಒಬ್ಬ ಅನಾಮಧೇಯ ಭಕ್ತರು ಸುಮಾರು ₹25 ರಿಂದ ₹30 ಕೋಟಿಯ ಮೌಲ್ಯದ ವಜ್ರ-ರತ್ನಖಚಿತ ರಾಮನ ವಿಗ್ರಹವನ್ನು ದಾನವಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ವಿಶಿಷ್ಟ ರತ್ನಮಯ ದೇವಮೂರ್ತಿ ಮಂಗಳವಾರ ಸಂಜೆ ಅಯೋಧ್ಯೆಗೆ ತರಲ್ಪಟ್ಟಿದ್ದು, ಈಗ ನಗರದಲ್ಲಿ ವಿಶೇಷ ಭದ್ರತೆಯ ಅಡಿಯಲ್ಲಿ ಇರಿಸಲಾಗಿದೆ.ಈ ರಾಮನ ವಿಗ್ರಹವು ದಕ್ಷಿಣ ಭಾರತದ ಪಾರಂಪರಿಕ ಶಿಲ್ಪಕಲಾ ಶೈಲಿಯ ಪ್ರಕಾರ ವಿನ್ಯಾಸಗೊಂಡಿದ್ದು, ಸುಮಾರು 10 ಅಡಿ ಎತ್ತರ ಮತ್ತು 8 ಅಡಿ ಅಗಲ ಹೊಂದಿದೆ.
ವಜ್ರ, ಪಚ್ಚೆ, ನೀಲಮಣಿ ಸೇರಿದಂತೆ ಅನೇಕ ಅಮೂಲ್ಯ ರತ್ನಗಳಿಂದ ಅಲಂಕರಿಸಲ್ಪಟ್ಟಿರುವ ಈ ಪ್ರತಿಮೆ ಕಲಾತ್ಮಕ ಕೌಶಲ್ಯ ಮತ್ತು ಭವ್ಯತೆ ಎರಡರ ಸಂಯೋಜನೆಯಾಗಿದೆ. ತಂಜಾವೂರಿನ ನುರಿತ ಶಿಲ್ಪಿಗಳು ಈ ಶಿಲ್ಪದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಡಾ. ಅನಿಲ್ ಮಿಶ್ರಾ ಅವರು ನೀಡಿದ ಮಾಹಿತಿಯ ಪ್ರಕಾರ, ದೇವಮೂರ್ತಿಯ ತೂಕವನ್ನು ಇದುವರೆಗೆ ನಿಖರವಾಗಿ ಅಳೆಯಲಾಗಿಲ್ಲ, ಆದರೆ ಪ್ರಾಥಮಿಕ ಅಂದಾಜು ಪ್ರಕಾರ ಇದನ್ನು ಸುಮಾರು ಐದು ಕ್ವಿಂಟಾಲ್ ಎಂದು ತಿಳಿಯಲಾಗಿದೆ.
ದಾನಿಯ ಗುರುತು ಇನ್ನೂ ಬಹಿರಂಗವಾಗಿಲ್ಲ್ತೆಂದೂ, ಶೀಘ್ರದಲ್ಲೇ ಅಧಿಕೃತ ವಿವರಗಳನ್ನು ಪ್ರಕಟಿಸಲಾಗುವುದೆಂದೂ ಅವರು ತಿಳಿಸಿದ್ದಾರೆ.
ಸದರಿ ವಿಗ್ರಹವನ್ನು ಪ್ರಥಮವಾಗಿ ಅಂಗದ್ ಟೀಲಾ ಪ್ರದೇಶದಲ್ಲಿರುವ ಸಂತ ತುಳಸಿದಾಸ ಮಂದಿರದ ಸಮೀಪ ಪ್ರದರ್ಶಿಸಲು ಯೋಜನೆ ಇದೆ. ಅದಾದ ನಂತರ ದೇಶದ ವಿವಿಧ ಭಾಗಗಳಿಂದ ಆಗಮಿಸಲಿರುವ ಸಂತರು ಮತ್ತು ಮಹಂತರು ಭಾಗವಹಿಸುವ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಆಯೋಜಿಸಲಾಗುವುದು.
ಈ ಅದ್ಧೂರಿ ಕಾರ್ಯಕ್ರಮವು ಡಿಸೆಂಬರ್ 29 ರಿಂದ 2026ರ ಜನವರಿ 2ರವರೆಗೆ ನಡೆಯಲಿರುವ ಶ್ರೀ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವದ ಭಾಗವಾಗಿದ್ದು, ಗರ್ಭಗುಡಿಯಲ್ಲಿ ಪ್ರತಿದಿನ ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳು, ಅಭಿಷೇಕ, ಶೃಂಗಾರ ಹಾಗೂ ವಿಶೇಷ ಆರತಿಗಳು ನೆರವೇರಲಿವೆ.





