
ಕರ್ನಾಟಕ ಕ್ರೀಡಾಕೂಟ 2025-26ರ ಲಾಂಛನವನ್ನು ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿರುವ ಒಲಂಪಿಕ್ ಭವನದಲ್ಲಿ ಬಿಡುಗಡೆಗೊಳಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಈ ಬಾರಿ ರಾಜ್ಯಮಟ್ಟದ ಕ್ರೀಡಾಕೂಟ ತುಮಕೂರಿನಲ್ಲಿ ಆಯೋಜನೆಯಾಗಲಿದೆ.ಜನವರಿ 16ರಿಂದ 22ರವರೆಗೆ ನಡೆಯಲಿರುವ ಈ ಸ್ಪರ್ಧೆಯಲ್ಲಿ ಒಟ್ಟು 27 ವಿವಿಧ ಕ್ರೀಡೆಗಳು ನಡೆಯಲಿದ್ದು, ನಾಲ್ಕು ಕ್ರೀಡೆಗಳು ಮಾತ್ರ ಬೆಂಗಳೂರಿನಲ್ಲಿ ನಡೆಯಲಿವೆ. “ಈ ಕ್ರೀಡಾಕೂಟವು ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಯುವ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಮಹತ್ವದ ವೇದಿಕೆಯಾಗಿದೆ,” ಎಂದು ಸಚಿವರು ಹೇಳಿದರು.ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು ₹70 ಕೋಟಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೊಸ ಜಿಲ್ಲಾ ಕ್ರೀಡಾಂಗಣವು ರಾಜ್ಯದ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳಲ್ಲಿ ಒಂದಾಗಿದೆ. “ಸಿಂಥೆಟಿಕ್ ಟ್ರ್ಯಾಕ್, ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಮೂಲಸೌಕರ್ಯದೊಂದಿಗೆ ಈ ಕ್ರೀಡಾಂಗಣ ಸಿದ್ಧವಾಗಿದೆ,” ಎಂದು ಅವರು ವಿವರಿಸಿದರು.ಈ ಬಾರಿ ಲಾಂಛನದಲ್ಲಿ ತುಮಕೂರು ಜಿಲ್ಲೆಯ ವಿಶಿಷ್ಟತೆಯಾದ ಕೃಷ್ಣಮೃಗ ಜಿಂಕೆಯ ಚಿತ್ರವನ್ನು ಅಳವಡಿಸಲಾಗಿದೆ. “ತುಮಕೂರಿನ ಸಹಜ ಸೌಂದರ್ಯ ಮತ್ತು ಚುರುಕುತನವನ್ನು ಪ್ರತಿನಿಧಿಸುವ ಈ ಲಾಂಛನವು ಕ್ರೀಡಾಸ್ಫೂರ್ತಿಗೆ ಹೊಸ ಪ್ರೇರಣೆ ನೀಡುತ್ತದೆ,” ಎಂದರು.

ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜ್ ಅವರು, ಕ್ರೀಡಾಪಟುಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವನ್ನು ಹೊಗಳಿದರು. “ಪ್ರತಿ ಕ್ಷೇತ್ರದ ಕ್ರೀಡಾ ಸಂಘಗಳಿಗೆ ₹50 ಲಕ್ಷಗಳಷ್ಟು ಅನುದಾನ ನೀಡಲಾಗಿದೆ. ರಾಷ್ಟ್ರಮಟ್ಟದಲ್ಲಿ ಇಂತಹ ಪ್ರೋತ್ಸಾಹದ ನಿದರ್ಶನ ತುಂಬಾ ವಿರಳ,” ಎಂದು ಹೇಳಿದರು.ಈ ವೇಳೆ ಕ್ರೀಡಾ ಆಯುಕ್ತ ಚೇತನ್ ಆರ್., ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪಾವಗಡ ಶಾಸಕರಾದ ಹೆಚ್.ವಿ. ವೆಂಕಟೇಶ್, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಹಾಗೂ ಒಲಂಪಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟಿ. ಅನಂತರಾಜ್ ಉಪಸ್ಥಿತರಿದ್ದರು.ಡಾ. ಪರಮೇಶ್ವರ ಅವರು ಕ್ರೀಡಾಪಟುಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ರಾಜ್ಯದಾದ್ಯಂತ ಇಂತಹ ಕ್ರೀಡಾಕೂಟಗಳು ನಿರಂತರವಾಗಿ ನಡೆಯಬೇಕು ಎಂದರು. “ಮಂಗಳೂರಿನ ಯಶಸ್ಸಿನ ನಂತರ, ತುಮಕೂರು ಕೂಡ ಒಂದೇ ಮಾದರಿಯ ಯಶಸ್ವಿ ಕ್ರೀಡಾಕೂಟವನ್ನು ದಾಖಲಿಸಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
(ವರದಿ: ಆಂಟೊನಿ)





