
ಚಿಕ್ಕಬಳ್ಳಾಪುರ: ಒಮ್ಮೆ ದೇಶದ ಚಿನ್ನದ ರಾಜಧಾನಿಯಾಗಿ ಹೆಸರು ಮಾಡಿದ್ದ ಕೋಲಾರ ಕೆಜಿಎಫ್ ಬಳಿಕ, ಇದೀಗ ಅದಕ್ಕೆ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೊಸ ನಿರೀಕ್ಷೆ ಮೂಡಿದೆ. ಈ ಪ್ರದೇಶದ ನೆಲದಾಳದಲ್ಲಿ ಚಿನ್ನದ ಖನಿಜ ಅಡಗಿರುವ ಸಾಧ್ಯತೆ ಇದೆ ಎನ್ನುವ ಸುದ್ದಿ ರಾಜ್ಯಾದ್ಯಂತ ಕುತೂಹಲ ಹೆಚ್ಚಿಸಿದೆ.
ಕರ್ನಾಟಕ–ಆಂಧ್ರಪ್ರದೇಶ ಗಡಿಭಾಗದ ಗುಡಿಬಂಡೆ ಮತ್ತು ಕದಿರಿ ಸುತ್ತಮುತ್ತ ಪ್ರದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಾಯುಮಾರ್ಗದ ಸಮೀಕ್ಷೆ ನಡೆಯುತ್ತಿದೆ. ಹೆಲಿಕಾಪ್ಟರ್ಗಳ ಮೂಲಕ ಭೂಮಿಯ ಆಳವನ್ನು ಪರಿಶೀಲಿಸುವ ವಿಶೇಷ ಸೆನ್ಸಾರ್ಗಳು ಮತ್ತು ಉಪಕರಣಗಳಿಂದ ಮಹತ್ವದ ದತ್ತಾಂಶ ಸಂಗ್ರಹಿಸಲಾಗುತ್ತಿದೆ.
ಈ ಸಂಪೂರ್ಣ ಸಮೀಕ್ಷೆಯ ಜವಾಬ್ದಾರಿಯನ್ನು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ (GSI) ವಹಿಸಿಕೊಂಡಿದ್ದು, ಮಣ್ಣಿನೊಳಗೆ ಚಿನ್ನದ ಅದಿರು ಇರುವುದನ್ನು ವೈಜ್ಞಾನಿಕವಾಗಿ ದೃಢಪಡಿಸುವುದೇ ಮುಖ್ಯ ಗುರಿಯಾಗಿದೆ. ಈ ಬೆಳವಣಿಗೆ ಗಣಿಗಾರಿಕೆ ಕ್ಷೇತ್ರದ ತಜ್ಞರು ಮಾತ್ರವಲ್ಲ, ಸ್ಥಳೀಯ ಜನರಲ್ಲೂ ಭಾರೀ ಕುತೂಹಲ ಹುಟ್ಟಿಸಿದೆ.
ಒಂದು ವೇಳೆ ಈ ಸಮೀಕ್ಷೆಯಲ್ಲಿ ಚಿನ್ನದ ಭಂಡಾರ ಪತ್ತೆಯಾದರೆ, ಅದು ಕರ್ನಾಟಕದ ಆರ್ಥಿಕ ಸ್ಥಿತಿಗೆ ಮಾತ್ರವಲ್ಲದೆ ದೇಶದ ಖನಿಜ ಕ್ಷೇತ್ರಕ್ಕೂ ದೊಡ್ಡ ಬದಲಾವಣೆ ತರಬಹುದೆಂಬ ಅಂದಾಜು ಮಾಡಲಾಗುತ್ತಿದೆ. ಈಗಾಗಲೇ ಸಂಗ್ರಹಿಸಿದ ಮಾಹಿತಿಯನ್ನು ವಿಜ್ಞಾನಿಗಳು ಆಳವಾಗಿ ವಿಶ್ಲೇಷಿಸುತ್ತಿದ್ದು, ಅಂತಿಮ ವರದಿ ಹೊರಬೀಳುವ ನಿರೀಕ್ಷೆ ತೀವ್ರವಾಗಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿರುವ ಚಿಕ್ಕಬಳ್ಳಾಪುರದ ಜನರು, “ಇದು ಮತ್ತೊಂದು ಕೆಜಿಎಫ್ ಕಥೆಯ ಆರಂಭವೇ?” ಎಂಬ ಪ್ರಶ್ನೆಯೊಂದಿಗೆ ಭವಿಷ್ಯದತ್ತ ನಿರೀಕ್ಷೆಯಿಂದ ನೋಡುವಂತಾಗಿದೆ.
ವರದಿ :- ಆಂಟೋನಿ ಪತ್ರಕರ್ತ





